1,940 total views
ಧರ್ಮನಿರಪೇಕ್ಷ, ವೈಜ್ಞಾನಿಕ ಆಶಯಗಳಿಗೆ ವಿರುದ್ಧವಾಗಿರುವ ವೈದಿಕ ಶಿಕ್ಷಣ, ಜ್ಯೋತಿಷ್ಯ ಮುಂತಾದುವನ್ನು ಶಿಕ್ಷಣದಲ್ಲಿ ತರಬಾರದು- ಅಜಯ್ ಕಾಮತ್ ಎಐಡಿಎಸ್ಒ ರಾಜ್ಯ ಕಾರ್ಯದರ್ಶಿ ಹೇಳಿಕೆ
‘ಹೊರ ರಾಷ್ಟ್ರದ ವಿದ್ಯಾರ್ಥಿಗಳನ್ನು ಆಕರ್ಷಿಸಲು’ ವೈದಿಕ ಗಣಿತ, ಸಂಸ್ಕೃತ, ಯೋಗ, ಆಯುರ್ವೇದ, ಜ್ಯೋತಿಷ್ಯದಂತಹ ವಿಷಯಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹೊಸದಾಗಿ ಸೇರಿಸಬೇಕೆಂದು ಯುಜಿಸಿ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಆದೇಶ ಹೊರಡಿಸಿದೆ. ಇದು ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿ 2020 ರ ಭಾಗವಾಗಿದೆ. ಯಾವ ವೈದಿಕ ಶಿಕ್ಷಣ ದಲಿತರನ್ನು, ಮಹಿಳೆಯರನ್ನು ಶಿಕ್ಷಣದಿಂದ ದೂರವಿರಿಸಿತ್ತೊ, ಅದರ ವಿರುದ್ಧ ಜ್ಯೋತಿಬಾ ಫುಲೆ, ಸಾವಿತ್ರಿ ಬಾಯಿ ಫುಲೆ ಜೀವನಪರ್ಯಂತ ಹೋರಾಡಿದ್ದರೊ ಆ ವ್ಯವಸ್ಥೆ ಮತ್ತೆ ಶಿಕ್ಷಣದಲ್ಲಿ ತರುವ ಸರ್ಕಾರದ ಈ ನಡೆಯನ್ನು ರಾಜ್ಯದ ವಿದ್ಯಾರ್ಥಿ ಸಮೂಹ ಹಾಗೂ ಎಲ್ಲಾ ಶಿಕ್ಷಣ ಪ್ರಿಯರು ವಿರೋಧಿಸುತ್ತಾರೆ. ಬ್ರಿಟಿಷರು ಭಾರತೀಯರನ್ನು ಅಂಧಕಾರದಲ್ಲಿಡಲು ವೈದಿಕ ಶಿಕ್ಷಣವನ್ನು ವಿಶ್ವವಿದ್ಯಾಲಯಗಳಲ್ಲಿ ಪರಿಚಯಿಸಲು ಹೊರಟಾಗ ಈಶ್ವರ ಚಂದ್ರ ವಿದ್ಯಾಸಾಗರರು ‘ವೇದಶಾಸ್ತ್ರ, ವೈದಿಕ ಜ್ಞಾನದಿಂದ ಯಾವ ಉಪಯೋಗವೂ ಇಲ್ಲ, ಬದಲಾಗಿ ಸಮಾಜದ ಪ್ರಗತಿಗೆ ಇಂಗ್ಲೀಷ್ ಭಾಷೆ, ವಿಜ್ಞಾನ, ಇತಿಹಾಸ, ಭೌಗೋಳ ಶಾಸ್ತ್ರದ ಅವಶ್ಯಕತೆ ಇದೆ’ ಎಂದು ಆ ನಡೆಯನ್ನು ವಿರೋಧಿಸಿದ್ದರು.
ಜ್ಯೋತಿಷ್ಯದ ಕುರಿತಾಗಿ ವಿವೇಕಾನಂದರು, ‘ಜ್ಯೋತಿಷ್ಯದ ಮೊರೆ ಹೋಗುವವನಿಗೆ ಬುದ್ಧಿ ಇಲ್ಲ. ನಾಲ್ಕು ದಿನಗಳ ಒಳ್ಳೆಯ ಊಟ ಹಾಗೂ ವಿರಾಮ, ಇದು ಸಾಲದಿದ್ದಲ್ಲಿ ವೈದ್ಯರ ಬಳಿ ಕಳುಹಿಸುವುದು ಉತ್ತಮ’ ಎಂದು ಜ್ಯೋತಿಷ್ಯ ಶಾಸ್ತ್ರವನ್ನು ಮಾನಸಿಕ ರೋಗ ಎಂದು ಹೀಗಳೆದಿದ್ದರು.
ಇಂತಹ ಅವೈಜ್ಞಾನಿಕ ವಿಷಯಗಳನ್ನು ಶಿಕ್ಷಣದಲ್ಲಿ ತರುವ ಸರ್ಕಾರದ ಉದ್ದೇಶವೇ ವಿದ್ಯಾರ್ಥಿಗಳನ್ನು ಅಂಧಕಾರದಲ್ಲಿಟ್ಟು, ಅವರಲ್ಲಿ ಅಂಧಾಭಿಮಾನ ಸೃಷ್ಟಿಸುವುದು. ‘ಧರ್ಮ, ಶಿಕ್ಷಣ ಹಾಗೂ ರಾಜಕೀಯದಿಂದ ಕೈತೆಗೆ’ ಎಂದಿದ್ದ ವಿವೇಕಾನಂದರ ಆಶಯಗಳ ವಿರುದ್ಧವಾಗಿ ಸರ್ಕಾರ ಕೋಮುದ್ವೇಷ ಸೃಷ್ಟಿಸಲು ಹೊರಟಿದೆ. ಸರ್ಕಾರದ ಈ ನಡೆಯನ್ನು ಎಐಡಿಎಸ್ಓ ಅತ್ಯುಗ್ರವಾಗಿ ಖಂಡಿಸುತ್ತದೆ.
ಜೊತೆಗೆ, ಎಲ್ಲಾ ವಿಶ್ವ ವಿದ್ಯಾಲಯಗಳಿಗೆ ತನ್ನದೇ ಆದ ಸ್ವಾಯತ್ತತೆ ಇದೆ. ಅಂತಹ ಸಂದರ್ಭದಲ್ಲಿ, ಇದನ್ನೇ ವಿವಿಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳು ಬೋಧಿಸಬೇಕು ಎಂದು ಹಲವು ನಿರ್ದೇಶನಗಳನ್ನು ಎನ್.ಇ.ಪಿ ಹೆಸರಿನಲ್ಲಿ ವಿಶ್ವವಿದ್ಯಾಲಯಗಳ ಮೇಲೆ ಹೇರುತ್ತಿರುವ ಯುಜಿಸಿಯ ಕ್ರಮ ಅತ್ಯಂತ ಅಪ್ರಜಾತಾಂತ್ರಿಕ ಹಾಗೂ ಸರ್ವಾಧಿಕಾರಿ ಧೋರಣೆಯಿಂದ ಕೂಡಿದೆ.
ಶಿಕ್ಷಣದ ಪ್ರಜಾಸತ್ತಾತ್ಮಕ ಹಾಗೂ ಧರ್ಮ ನಿರಪೇಕ್ಷ ಆಶಯಗಳಿಗೆ ವಿರುದ್ಧವಾಗಿರುವ ಈ ಆದೇಶವನ್ನು ಯುಜಿಸಿ ಈ ಕೂಡಲೇ ಹಿಂಡಪೆಯಬೇಕೆಂದು ಎಐಡಿಎಸ್ಒ ಆಗ್ರಹಿಸುತ್ತದೆ.
ಅಂತೆಯೇ, ರಾಜ್ಯದ ಜನರ ಬೇಡಿಕೆಗೆ ಮನ್ನಣೆ ನೀಡಿ, ತನ್ನ ಪ್ರಣಾಳಿಕೆಯಲ್ಲಿ ಎನ್.ಇ.ಪಿ 2020 ಅನ್ನು ಹಿಂಪಡೆಯುತ್ತೇವೆ ಹಾಗೂ ವೈಜ್ಞಾನಿಕ ದೃಷ್ಟಿಕೋನ ಬೆಳೆಸುವ ಶಿಕ್ಷಣ ನೀಡುತ್ತೇವೆ ಎಂಬ ಭರವಸೆ ನೀಡಿದ ಕಾಂಗ್ರೆಸ್ ಪಕ್ಷ ತನ್ನ ಭರವಸೆ ಉಳಿಸಿಕೊಳ್ಳುತ್ತದೆ ಎಂದು ಆಶಿಸುತ್ತೇವೆ.
ವರದಿ ಚೆಲುವರಾಜ ಬಂಗಾರಪ್ಪ