2,024 total views
ರಂಗಾಯಣಕ್ಕೆ ಮರುಜೀವ ನೀಡಿದ ಜೋಶಿ
ಕಲಬುರಗಿ–ಮೂರುವರೆ ವರ್ಷಗಳ ಹಿಂದೆ ಕಲಬುರಗಿ ರಂಗಾಯಣ ಸೊರಗಿ ಹೋಗದಂತೆ ಸಶಕ್ತವಾಗಿ ಕಟ್ಟಿದ ತೃಪ್ತಿಯ ಜತೆಗೆ ಸಹೃದಯರ ಪ್ರೋತ್ಸಾಹ ಮರೆಯಲಾಗದ ಅನುಭವ ನೀಡಿದೆ ಎಂದು ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಹೇಳಿದರು. ರಂಗಾಯಣ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ಶಾಪಗ್ರಸ್ತವಾಗಿದ್ದ ರಂಗಾಯಣದ ಶಾಪ ವಿಮೋಚನೆ ಮಾಡಿ, ಕರ್ನಾಟಕದ ರಂಗವಲಯ ಗಮನ ಸೆಳೆಯುವಂತೆ ಮಾಡಲು ರಂಗಾಯಣದ ಕಲಾವಿದರು, ಹವ್ಯಾಸಿ ಕಲಾವಿದರು, ಸಾಹಿತಿಗಳು, ಸಂಗೀತಗಾರರು, ಚಿತ್ರ ಕಲಾವಿದರು ಕಾರಣರಾಗಿದ್ದಾರೆ ಎಂದು ಹೇಳಿದರು. ಆರಂಭದ ರಂಗಾಯಣದ ಸ್ಥಿತಿಗತಿ, ಕಳೆದ ಮೂರು ವರ್ಷ ಐದು ತಿಂಗಳ ತಮ್ಮ ಆಡಳಿತದಲ್ಲಿ ಜರುಗಿದ ಕಾರ್ಯ ಕ್ರಮಗಳು, ವಿವಿಧ ಯೋಜನೆ, ಸಂಕಿರಣಗಳು ಹಾಗೂ ನಾಟಕೋತ್ಸವಗಳ ಕುರಿತು ವಿವರಿಸಿದರು. ಕಲಬುರಗಿ ಜಿಲ್ಲೆಯಾಚೆ ಹೋಗಿರದ ರಂಗಾಯಣವನ್ನು ಹಳ್ಳಿಯಿಂದ ದಿಲ್ಲಿವರೆಗೆ ತಲುಪಲು ಕಲಾವಿದರು ಕಾರಣರಾಗಿದ್ದು, ತಮ್ಮ ಅವಧಿಯ ಯಶಸ್ಸು ಸಂಪೂರ್ಣವಾಗಿ ರಂಗಾಯಣದ ಕಲಾವಿದರಿಗೇ ಸಲ್ಲುತ್ತದೆ ಎಂದು ಹೇಳಿದರು. ಕೇವಲ ರಂಗ ಚಟುವಟಿಕೆಗಳಿಗೆ ಮಾತ್ರ ಮೀಸಲಾಗದೆ, ರಂಗಾಯಣಕ್ಕೆ ಅಗತ್ಯವಾದ ಸಲಕರಣೆಗಳು, ಬಯಲು ರಂಗ ಮಂದಿರ, ಆಡಳಿನ ಭವನ, ಶೌಚಾಲಯ ಸಂಕೀರ್ಣ ನಿರ್ಮಾಣ ಮಾಡಿದ್ದು, ಇದಕ್ಕೆ ಕಾರಣರಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು, ಜಂಟಿ ನಿರ್ದೇಶಕರು, ಸಹಾಯಕ ನಿರ್ದೇಶಕರು ಹಾಗೂ ಆಡಳಿತಾಧಿಕಾರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಸಭೆಯಲ್ಲಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್.ಚೆನ್ನೂರ್, ಉಪ ನಿರ್ದೇಶಕಿ ಜಗದೀಶ್ವರಿ ಶಿವಕೇರಿ, ಸಹಾಯಕ ನಿರ್ದೇಶಕಿ ಉತ್ತರಾದೇವಿ ಹಾಗೂ ನಗರದ ಸಾಂಸ್ಕೃತಿಕ ವಲಯದ ದಿಗ್ಗಜರು ಭಾಗವಹಿಸಿದ್ದರು. ಅಭಿನಂದನೆಗಳ ಮಹಾಪೂರ ಕಲಬುರಗಿ ರಂಗಾಯಣದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೂರು ವರ್ಷ ಐದು ತಿಂಗಳ ಕಾಲಾವಧಿ ಪೂರೈಸಿದ ನಿರ್ದೇಶಕ ಪ್ರಭಾಕರ ಜೋಶಿ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂತು. ಸಾಹಿತಿಗಳು, ಕಲಾವಿದರು, ನಾಟಕಕಾರರು, ನಟರು, ನಿರ್ದೇಶಕರು, ಅಭಿನಂದನಾ ನುಡಿಗಳನ್ನು ಹೇಳಿ, ಕಳೆದ ಮೂರು ವರ್ಷಗಳ ಅವಧಿಯಲ್ಲಿ ನೂರಾರು ಕಾರ್ಯಕ್ರಮಗಳನ್ನು ನೀಡಿದ ಪ್ರಭಾಕರ ಜೋಶಿ ಅವರು ರಂಗಾಯಣಕ್ಕೆ ಮರು ಜೀವ ನೀಡಿದ ನಿರ್ದೇಶಕ ಎಂದು ಮೆಚ್ಚುಗೆ ಸೂಚಿಸಿದರು. ಕೆ.ಎಚ್.ಚೆನ್ನೂರ ಅಧ್ಯಕ್ಷತೆ ವಹಿಸಿದ್ದರು. ಉಪನಿರ್ದೇಶಕಿ ಜಗದೀಶ್ವರಿ ಶಿವಕೇರಿ ಸ್ವಾಗತಿಸಿದರು. ರಂಗ ನಿರ್ದೇಶಕ ವಿಶ್ವರಾಜ ಪಾಟೀಲ ನಿರೂಪಿಸಿ ವಂದಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರು ಅವರು, ಇನ್ನಿಂಗ್ ಎಂಡ್ ವಿತ್ ಪ್ರಭಾಕರ ಜೋಶಿ ಕಾರ್ಯಕ್ರಮ ನಡೆಸಿಕೊಟ್ಟರು. ಇದರಲ್ಲಿ ಹಿರಿಯರಾದ ಎ.ಕೆ.ರಾಮೇಶ್ವರ, ಡಾ.ಸ್ವಾಮಿರಾವ ಕುಲಕರ್ಣಿ, ಸಿದ್ದಪ್ಪ ತಳ್ಳಳ್ಳಿ, ನಾಗಪ್ಪಯ್ಯಸ್ವಾಮಿ ಅಳ್ಳೊಳ್ಳಿ, ಸುಬ್ರಾವ್ ಕುಲಕರ್ಣಿ, ಬಸವರಾಜ ಕೊನೇಕ, ಸಿ.ಎಸ್.ಮಾಲಿಪಾಟೀಲ, ನರಸಿಂಗರಾವ ಹೇಮನೂರು, ದತ್ತಾತ್ರೇಯ ವಿಶ್ವಕರ್ಮ, ಗುರುಶಾಂತಯ್ಯ ಬಂಟನೂರ, ಬಸವಪ್ರಭು, ಚಿತ್ರ ಶೇಖರ ಕಂಠಿ, ಆಶಾ ಕಂಠಿ, ಬಾಬುರಾವ ಕೋಬಾಳ, ಬಸಯ್ಯಗುತ್ತೇದಾರ, ಡಾ.ಶ್ರೀಶೈಲ ಬಿರಾದಾರ, ದಿವಾಕರ ಜೋಶಿ, ಜನಾರ್ದನ ಭಟ್, ಡಾ.ವಿ.ಬಿ.ಬಿರಾದಾರ, ಶಾಂತಲಿಂಗಯ್ಯ ಮಠಪತಿ, ನಾರಾಯಣ ಕುಲಕರ್ಣಿ, ನಾರಾಯಣ ಜೋಶಿ, ಮುರುಗೇಂದ್ರ ನಾಚವಾರ, ಶ್ರುತಿ ಕುಲಕರ್ಣಿ, ಡಾ.ಶುಭಾಂಗಿ ಸುಧೀರ, ಶಂಕರ ಜೋಶಿ, ಮೋಹನ ಸೀತನೂರ, ಬಾಬುರಾವ, ನಯನಾ ಅರವಿಂದ, ವಿಶ್ವನಾಥ ಕೋರಿ, ದತ್ತರಾಜ ಕಲಶೆಟ್ಟಿ ಇತರರಿದ್ದರು.
ವರದಿ -ಎಮ್. ಬಿ ಹಡಪದ ಸುಗೂರ ಎನ್.