61 total views
ಕಲಬುರಗಿ: ನಾಡಿನ ಜನರ ಅಶೋತ್ತರಗಳಿಗೆ ಸ್ಪಂದಿಸುವ ಜನಪರ ಬಜೆಟ್ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಮಂಗಳವಾರ ಅಫಜಲಪೂರ ತಾಲೂಕಿನ ಗಾಣಗಾಪೂರಕ್ಕೆ ಆಗಮಿಸಿದ ಅವರು, ಶ್ರೀ ದತ್ತಾತ್ರೇಯನಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದು, ಆಯವ್ಯಯ ಏನಿರಲಿದೆ ಎಂಬುದನ್ನು ಕಾದು ನೋಡಿ ಎಂದರು. ಕರುನಾಡಿನ ಸಮೃದ್ಧಿ, ಸುಭಿಕ್ಷೆಗೆ ಶ್ರೀ ಗುರು ದತ್ತಾತ್ರೇಯರ ಬಳಿ ಪ್ರಾರ್ಥನೆ ಸಲ್ಲಿಸಿರುವೆ. ದತ್ತಾತ್ರೇಯನ ಆಶೀರ್ವಾದ ,ಅನುಗ್ರಹ ನಮ್ಮೆಲ್ಲರ ಮೇಲಿರಲಿದೆ ಎಂದರು. ದತ್ತನ ಕ್ಷೇತ್ರದ ಅಭಿವೃದ್ದಿಗೆ 67 ಕೋಟಿ ರೂ. ಮಾಸ್ಟರ್ ಪ್ಲ್ಯಾನ್ ಸಿದ್ಧ: ಕಾಶಿ ವಿಶ್ಚನಾಥ ಮತ್ತು ಉಜ್ಜೈನಿಯ ಕಾಳ ಹಸ್ತಿ ಮಾದರಿಯಲ್ಲಿ ಗಾಣಗಾಪೂರ ಸಮಗ್ರ ಅಭಿವೃದ್ಧಿಪಡಿಸಲಾಗುವುದು. 2022-23ನೇ ಸಾಲಿಗೆ 5 ಕೋಟಿ ರೂ. ನೀಡಲಾಗಿದೆ. ಜಿಲ್ಲಾಡಳಿತ ದತ್ತನ ಕ್ಷೇತ್ರದ ಅಭಿವೃದ್ಧಿಗೆ 67 ಕೋಟಿ ರೂ. ವೆಚ್ಚದ ಡಿ.ಪಿ.ಆರ್. ಸಿದ್ದಪಡಿಸಿದ್ದು, ಬರುವ ಆಯವ್ಯಯದಲ್ಲಿ ಇದನ್ನು ಘೋಷಿಸಿ ಅನುಷ್ಠಾನಕ್ಕೆ ತರಲಾಗುವುದು ಎಂದರು. ನಾಲ್ಕೈದು ರಾಜ್ಯಗಳ ಯಾತ್ರಿಕರು ಇಲ್ಲಿ ಬರುವುದರಿಂದ ಇದನ್ನು ಯಾತ್ರಿ ಕೇಂದ್ರವನ್ನಾಗಿಸಿ ಅಭಿವೃದ್ಧಿ ಪಡಿಸಲಾಗುವುದು. ವಿಶೇಷವಾಗಿ ದೇವಸ್ಥಾನ ಹಾಗೂ ಭೀಮಾ ನದಿ ತೀರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಗಮನಹರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುದ್ದಿಗಾರರಿಗೆ ಪ್ರಶ್ನೆಗೆ ಉತ್ತರಿಸಿದರು. ಗಾಣಗಾಪೂರದ ದತ್ತನ ಸನ್ನಿಧಿಯಲ್ಲಿ ಸಿ.ಎಂ. ಅವರಿಗೆ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಶಾಸಕರಾದ ಬಸವರಾಜ ಮತ್ತಿಮೂಡ, ಶಶೀಲ ನಮೋಶಿ, ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಸಾಥ್ ನೀಡಿದರು. ನಂತರ ಮುಖ್ಯಮಂತ್ರಿಗಳು ವಿಧಾನ ಪರಿಷತ್ತಿನ ಮುಖ್ಯ ಸಚೇತಕ ವಿಠ್ಠಲ್ ಹೇರೂರ ಅವರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ವರದಿಗಾರರು- ಮಲ್ಲಿಕಾರ್ಜುನ ಬಿ ಹಡಪದ. ಸುಗೂರ ಎನ್