22 total views
ಲಕ್ಷಾಂತರ ರೂ ಸಾಲ ಮಾಡಿಕೊಂಡಿದ್ದ ರೈತರೊಬ್ಬರು ನೇಣಿಗೆ ಶರಣಾದ ಘಟನೆ ತಾಲೂಕಿನ ಬನ್ನಿಕುಪ್ಪೆಯಲ್ಲಿ ನಡೆದಿದೆ. ಹುಣಸೂರು ತಾಲೂಕಿನ ಬನ್ನಿಕುಪ್ಪೆಯ ಜವರನಾಯಕರ ಪುತ್ರ ಶಿವಣ್ಣನಾಯಕ(೫೬) ನೇಣಿಗೆ ಕೊರಳೊಡ್ಡಿದಾತ. ಇವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ.ಶಿವಣ್ಣ ನಾಯಕರ ಹೆಸರಿನಲ್ಲಿ ಹೆಸರಿನಲ್ಲಿ 2.20 ಎಕರೆ ಜಮೀನಿದ್ದು, ವ್ಯವಸಾಯಕ್ಕಾಗಿ, ಸಂಸಾರ ನಿರ್ವಹಿಸಲು ಮತ್ತು ಮಗಳ ಮದುವೆ ಮಾಡಲು ಬನ್ನಿಕುಪ್ಪೆ ಗ್ರಾಮದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ 7.5 ಲಕ್ಷ ಸಾಲ ಹಾಗೂ ಮಹಿಳಾ ಸಂಘಗಳಿಂದ ಸಾಲ ಮಾಡಿ ಜಮೀನಿನಲ್ಲಿ ಹೊಗೆ ಸೊಪ್ಪು ಬೆಳೆ ಬೆಳೆದಿದ್ದು, ಕಳೆದ ಆರು ತಿಂಗಳ ಹಿಂದೆ ಸುರಿದ ಧಾರಾಕಾರ ಮಳೆಗೆ ಬೆಳೆ ನಷ್ಟವಾಗಿ, ನಿರೀಕ್ಷೆಯಂತೆ ಬೆಳೆ ಬಾರದ ಹಿನ್ನೆಲೆಯಲ್ಲಿ ಸಾಲ, ಬಡ್ಡಿ ಜಾಸ್ತಿಯಾಗಿ ಸಾಲ ಭಾದೆಯಿಂದ ಮನನೊಂದ ಶಿವಣ್ಣ ನಾಯಕ ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ ಜಮೀನಿನಲ್ಲಿರುವ ಮಾವಿನ ಮರಕ್ಕೆ ಭಾನುವಾರ ಸಂಜೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು, ಮನೆಯವರು ಹುಡುಕಾಟ ನಡೆಸಿ ಜಮೀನಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಶಿವಣ್ಣನಾಯಕರ ಪುತ್ರ ಸತೀಶ್ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶವವನ್ನು ಸ್ವಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಸಿದರು. ವಿಷಯ ತಿಳಿದ ಶಾಸಕ ಎಚ್.ಪಿ.ಮಂಜುನಾಥ್ ಭೇಟಿ ನೀಡಿ ಅಂತಿಮ ದರ್ಶನ ಪಡೆದು ಸಾಂತ್ವಾನ ಹೇಳಿದರು.